ಸಮನ್ಸ್ ಜಾರಿಗೆ ನಿರ್ಬಂಧ: ಕಾನೂನು ಪದವಿ ಪಡೆದವರೆಲ್ಲ ವಕೀಲರಲ್ಲ – ವಕೀಲ ವೃತ್ತಿ ನಡೆಸದ ಅಡ್ವಕೇಟ್‌ಗಳಿಗೆ ರಕ್ಷಣೆ ಅನ್ವಯವಲ್ಲ: ಸುಪ್ರೀಂ ಕೋರ್ಟ್

ಪೂರ್ವಾನುಮತಿ ಇಲ್ಲದೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ, ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಗಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯ ಅನುಮತಿ ಪಡೆದೇ ಸಮನ್ಸ್ ಜಾರಿಗೊಳಿಸಬಹುದು ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಕಾನೂನು ಪಡೆದವರೆಲ್ಲ ವಕೀಲರಲ್ಲ ಎಂದು ಹೇಳಿದೆ.

ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.

ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು ಈ ರೀತಿ ಅಭಿಪ್ರಾಯಪಟ್ಟದೆ.
ಭಾರತೀಯ ಸಾಕ್ಷ್ಯ ಅಧಿನಿಯಮ (ಬಿ.ಎಸ್.ಎ.)ದ ಸೆಕ್ಷನ್ 132ರ ಪ್ರಕಾರ ಸಾಂಸ್ಥಿಕ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವ ವಕೀಲರಲ್ಲ. ಹಾಗಾಗಿ, ಕಾನೂನು ಪದವಿ ಪಡೆದ ಎಲ್ಲ ಲಾಯರ್‌ಗಳು ವಕೀಲರಲ್ಲ. ಸುಪ್ರೀಂ ಕೋರ್ಟ್‌ ಕೇವಲ ವೃತ್ತಿಪರ ಸವಲತ್ತುಗಳ ಕಾರ್ಯವಿಧಾನದ ಕುರಿತಷ್ಟೇ ತೀರ್ಪು ನೀಡಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಕಾನೂನು ಪದವಿ ಪಡೆದು ಕಂಪೆನಿಗಳಲ್ಲಿ ಯಾ ಸಂಸ್ಥೆಗಳಲ್ಲಿ ಲೀಗಲ್ ಎಡ್ವಸರ್ ಆಗಿರುವವರು ಅಡ್ವಕೇಟ್ ಎಂಬ ಪದದ ವ್ಯಾಪ್ತಿಗೆ ಬರುವುದಿಲ್ಲ. ಅವರಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿ.ಎಸ್.ಎ.)ದ ಸೆಕ್ಷನ್ 132ರ ಅಡಿಯಲ್ಲಿ ರಕ್ಷಣೆ ಸಿಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾಲಯ ಹೇಳಿರುವಂತೆ ಲಾಯ‌ರ್ ಎಂಬುವವರು ಕಾನೂನು ಶಿಕ್ಷಣ ಪಡೆದ ಯಾವುದೇ ವ್ಯಕ್ತಿ. ಆದರೆ ಅಡ್ವಕೇಟ್ ಎಂಬುದು ವಕೀಲರ ಕಾಯಿದೆ 1961ರ ಅಡಿಯಲ್ಲಿ ನಿರ್ಧರಿಸಲಾದ ವಿಶೇಷ ಕಾನೂನು ಸ್ಥಾನಮಾನವಾಗಿದೆ. ವಿವಿಧ ರಾಜ್ಯಗಳ ವಕೀಲರ ಪರಿಷತ್ತಿನಲ್ಲಿ ನೋಂದಾಯಿತರಾದವರನ್ನು ಮಾತ್ರ ಅಡ್ವಕೇಟ್‌ಗಳೆಂದು ಪರಿಗಣಿಸಲಾಗುತ್ತದೆ.

ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದಲ್ಲಿ ನಿರಂತರ ಕಾನೂನು ವೃತ್ತಿ (ಪ್ರಾಕ್ಟಿಸ್) ಮಾಡದೆ ಇರುವವರನ್ನು ಅಡ್ವಕೇಟ್‌ಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಪ್ರಕಾರ ಕಕ್ಷಿದಾರ ಮತ್ತು ಅಡ್ವಕೇಟ್ ನಡುವಿನ ಸಂಭಾಷಣೆ ಗೌಪ್ಯವಾಗಿರಬೇಕೆಂದು ರಕ್ಷಣೆ ನೀಡಿರುವ ನ್ಯಾಯಪೀಠ, ಈ ರಕ್ಷಣೆ ಕೋರ್ಟ್ ಮುಂದೆ ವಾದ ಮಂಡಿಸುವ ವಕೀಲರಿಗೆ ಮಾತ್ರ ಸೀಮಿತವಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *