
ಬಂಟ್ವಾಳ: ತುಂಬೆ ಗ್ರಾಮದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳುತ್ತಿದ್ದೇನೆಂದು ಹೇಳಿ ಮನೆಯಿಂದ ಹೊರಟ ನಂತರ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ತುಂಬೆ ಗ್ರಾಮದ ಬಳ್ಳಾರಿ ನಿವಾಸಿ ಚೆನ್ನಕೇಶವ ಅಲಿಯಾಸ್ ಕೇಶವ (37) ಎಂದು ಗುರುತಿಸಲಾಗಿದೆ. ಈ ಸಂಬಂಧ ಕೇಶವರ ಬಂಧು ದೀಕ್ಷಿತ್ ದೂರು ದಾಖಲಿಸಿದ್ದಾರೆ.
ಕೇಶವ ಅವರು ಮೋಡಂಕಾಪಿನ ಖಾಸಗಿ ಸಂಸ್ಥೆಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದರು. ಅ.25 ರಂದು ಸುವಾಸನೆ ವಸ್ತುಗಳ ಲೈನ್ ಸೇಲ್ಸ್ ಕಾರ್ಯ ಮುಗಿಸಿಕೊಂಡ ನಂತರ ಮಧ್ಯಾಹ್ನ 2.30ರ ಸುಮಾರಿಗೆ ಪಂಪ್ವೆಲ್ನಲ್ಲಿ ವಾಹನದಿಂದ ಇಳಿದು, ಕಂಪನಿಗೆ ಹಿಂತಿರುಗುವ ಮೊದಲು ಇನ್ನೊಂದು ಕೆಲಸವಿದೆ ಎಂದು ಚಾಲಕನಿಗೆ ತಿಳಿಸಿದ್ದರು.
ನಂತರ ಸುಮಾರು 3.30ರ ಸಮಯದಲ್ಲಿ ದೀಕ್ಷಿತ್ ಅವರ ಅತ್ತಿಗೆಗೆ ಕರೆಮಾಡಿ “ನಾನು ಕೆಲಸಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ, ಮೊಬೈಲ್ ಬ್ಯಾಟರಿ ಕಡಿಮೆಯಾಗಿರುವುದರಿಂದ ಫೋನ್ ಆಫ್ ಆಗಬಹುದು, ನಾಲ್ಕು ದಿನಗಳ ಬಳಿಕ ಸಂಪರ್ಕಿಸುತ್ತೇನೆ” ಎಂದು ತಿಳಿಸಿದ್ದಾರೆ.
ಆದರೆ ಅದಾದ ಬಳಿಕ ಅವರು ಯಾರನ್ನೂ ಸಂಪರ್ಕಿಸಿಲ್ಲ, ಯಾವುದೇ ಬಂಧುಗಳ ಮನೆಗೂ ತೆರಳಿಲ್ಲ ಹಾಗೂ ಕೆಲಸದ ಸ್ಥಳಕ್ಕೂ ಹಾಜರಾಗಿಲ್ಲ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.


