
ಮಂಗಳೂರು: ಕರ್ನಾಟಕ ಮತ್ತು ಕೇರಳದ ಪ್ರಮುಖ ಕರಾವಳಿ ನಗರಗಳಾದ ಮಂಗಳೂರು ಮತ್ತು ತಿರುವನಂತಪುರಂ ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಕ್ಟೋಬರ್ 27ರಿಂದ ಹೊಸ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ. ಈ ಮೂಲಕ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ರೈಲಿನಲ್ಲಿ ಸುಮಾರು 9 ಗಂಟೆಗಳಿಂದ ವಿಮಾನದಲ್ಲಿ ಕೇವಲ 1 ಗಂಟೆ 20 ನಿಮಿಷಕ್ಕೆ ಇಳಿಕೆಯಾಗಲಿದೆ.
ಈ ಹೊಸ ಸೇವೆಯು ವಾರದಲ್ಲಿ ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಮಂಗಳೂರಿನಿಂದ ತಿರುವನಂತಪುರಂಕ್ಕೆ ವಿಮಾನ ಸಂಖ್ಯೆ IX 5531 ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 8:45ಕ್ಕೆ ಹೊರಟು 10:05ಕ್ಕೆ ತಲುಪಲಿದೆ. ಅದೇ ರೀತಿ, ತಿರುವನಂತಪುರಂದಿಂದ ಮಂಗಳೂರಿಗೆ ವಿಮಾನ ಸಂಖ್ಯೆ IX 5532 ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಮುಂಜಾನೆ 4:25ಕ್ಕೆ ಹೊರಟು 5:45ಕ್ಕೆ ಮಂಗಳೂರನ್ನು ತಲುಪಲಿದೆ.
ಪ್ರಸ್ತುತ, ಈ ಎರಡು ನಗರಗಳ ನಡುವೆ ವೇಗದ ಸಾರಿಗೆ ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಲಭ್ಯವಿದ್ದು, 620 ಕಿ.ಮೀ. ದೂರವನ್ನು ಕ್ರಮಿಸಲು ಸುಮಾರು 8 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಹೊಸ ವಿಮಾನ ಸೇವೆಯಿಂದಾಗಿ ಪ್ರಯಾಣಿಕರು 7 ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಹೊಸ ಮಾರ್ಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ”ಪ್ರಕೃತಿ, ಸಂಸ್ಕೃತಿ ಮತ್ತು ಪ್ರಶಾಂತತೆ ಮೇಳ್ಳೆಸುವ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ,” ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಈಗಾಗಲೇ ಮಂಗಳೂರಿನಿಂದ ಮುಂಬೈ, ಹೊಸದಿಲ್ಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ದುಬೈ, ಅಬುದಾಬಿ, ದಮ್ಮಾಮ್, ಬಹರೈನ್, ದೋಹಾ, ಜಿದ್ದಾ ಮತ್ತು ಕುವೈತ್ಗೆ ನೇರ ವಿಮಾನ ಸಂಪರ್ಕವಿದ್ದು, ಈ ಪಟ್ಟಿಗೆ ಈಗ ತಿರುವನಂತಪುರಂ ಕೂಡ ಸೇರ್ಪಡೆಯಾಗಿದೆ.


