
ಕಾಸರಗೋಡು,: ಡಿವೈಎಫ್ಐ ನಾಯಕಿ ಮತ್ತು ಯುವ ವಕೀಲೆ ರಂಜಿತಾ ಕುಮಾರಿ (30) ಮಂಗಳವಾರ ಸಂಜೆ ಕುಂಬ್ಳೆಯ ಬಥೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಅವರು ತಮ್ಮ ಕಚೇರಿಯೊಳಗೆ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಜೆಯಿಂದ ಅವರಿಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕುಟುಂಬ ಸದಸ್ಯರು ಅವರ ಕಚೇರಿಗೆ ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡುಕೊಂಡರು. ಅವರು ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಬಾಗಿಲು ಒಡೆದು ನೋಡಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಂಜಿತಾ ಕುಂಬ್ಳೆಯಲ್ಲಿ ಡಿವೈಎಫ್ಐನ ಪ್ರಮುಖ ನಾಯಕಿಯಾಗಿದ್ದರು, ಮಹಿಳಾ ಸಂಘದ ಪ್ರದೇಶ ಸಮಿತಿಯ ಅಧ್ಯಕ್ಷೆ, ಡಿವೈಎಫ್ಐ ಬ್ಲಾಕ್ ಘಟಕದ ಖಜಾಂಚಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅವರು ಆ ಪ್ರದೇಶದ ಪ್ರಬಲ ಮತ್ತು ಭರವಸೆಯ ಸಿಪಿಐ(ಎಂ) ನಾಯಕಿ ಎಂದೂ ಪರಿಗಣಿಸಲ್ಪಟ್ಟಿದ್ದರು.
ಮೃತದೇಹದ ಬಳಿ ಒಂದು ಚೀಟಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಸಾವು ಪಕ್ಷದ ಕಾರ್ಯಕರ್ತರು ಮತ್ತು ಸಹಚರ ಅಘಾತಕ್ಕೆ ಉಂಟು ಮಾಡಿದೆ. ರಂಜಿತಾ ಅವರ ಸಹೋದರ, ಸಿಪಿಐ(ಎಂ) ಕಾರ್ಯಕರ್ತ ಮತ್ತು ಆಟೋರಿಕ್ಷಾ ಚಾಲಕ ಅಜಿತ್ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಅವರು ಪತಿ ಮತ್ತು ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಕುಂಬ್ಳೆ ಸೇವಾ ಸಹಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
