
ಬೆಂಗಳೂರು: ಬರ್ತ್ಡೇ ಪಾರ್ಟಿ ಇದೆ ಎಂದು ಆಸೆ ತೋರಿಸಿ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೋಗೂರು ಬಳಿ ಸೋಮವಾರ ಸಂಜೆ ನಡೆದಿದೆ.
ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಮಗನನ್ನು ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್ (24) ಕಿಡ್ನಾಪ್ ಮಾಡಿದ್ದ. ಮನೆ ಬಳಿಯಿದ್ದ ಬಾಲಕನಿಗೆ ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ.
ಪೋಷಕರಿಗೆ ಕರೆ ಮಾಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆರೋಪಿ ಓಡಾಟ ನಡೆಸಿದ್ದು, ಪದೇ ಪದೇ ಲೊಕೇಶನ್ ಬದಲಿಸಿ ಹಲವು ಕಡೆ ಆಟೋದಲ್ಲಿ ಸುತ್ತಾಟ ನಡೆಸಿ ಪೊಲೀಸರ ದಾರಿ ತಪ್ಪಿಸಿದ್ದಾನೆ.
ಕೊನೆಗೂ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಇಂದು ಬೆಳಗ್ಗೆ ಬಾಲಕ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ಸ್ಪೆಕ್ಟರ್ ನವೀನ್, ಪಿಎಸ್ಐ ಸಿದ್ದಪ್ಪ ಸೇರಿ ಹಲವು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


