
ಮಂಗಳೂರು : ಮಾರ್ಚ್ : 17: ಪ್ರೈಮ್ ಟಿವಿ ನ್ಯೂಸ್ : ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ ರೈ ದೇಶದಲ್ಲಿ ಬಿಜೆಪಿಯ ಕಳೆದ ಎರಡು ಅವಧಿಯ ಆಡಳಿತವನ್ನು ಅವಲೋಕಿಸಿದಾಗ ದೇಶದ ಅಭಿವೃದ್ಧಿಯ ಕುಂಠಿತವಾದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಕರಾವಳಿಯಲ್ಲೂ ಬಿಜೆಪಿ ವಿರೋಧಿ ಅಲೆ ಇದ್ದು ಬದಲಾವಣೆಯ ಗಾಳಿ ಬೀಸುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಕೆಲಸ ಮಾಡಿಲ್ಲ ಅಂತ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಈ ಬಾರಿ 15ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೋಕಸಭಾ ಸದಸ್ಯರು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐಟಿ, ಇಡಿ ದಾಳಿ ನಡೆಸಿ ಕಂಪನಿಗಳು ಹೆದರುವಂತೆ ಮಾಡಿ ಮೋದಿಯವರು ಕಂಪನಿಗಳ ಬಾಂಡ್ ಸಿಗುವಂತೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇಂತಹ ಅನೇಕ ಹಗರಣಗಳನ್ನು ನಡೆಸಿದ್ದು ಈ ಕುರಿತು ಸಮಗ್ರ ತನಿಖೆ ಮಾಡಬೇಕು. ಪಾಕಿಸ್ತಾನ ಮೂಲದ ಕಂಪೆನಿಗಳಿಂದಲೂ ಬಿಜೆಪಿ ಚುನಾವಣಾ ಬಾಂಡ್ ಸಂಗ್ರಹಿಸಿದೆ. ಇದುವರೆಗಿನ ಮಾಹಿತಿ ಪ್ರಕಾರ ಚುನಾವಣಾ ಬಾಂಡ್ ಗಳಲ್ಲಿ ಶೇ.50 ಬಿಜೆಪಿ ಪಡೆದಿದೆ. ಕಾಂಗ್ರೆಸ್ ಪಾಲು ಕೇವಲ 11 ಶೇ. ಮಾತ್ರ. ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಶುಭೋದಯ ಆಳ್ವ, ಶಶಿಧರ ಹೆಗ್ಡೆ, ಹರಿನಾಥ್, ಅಪ್ಪಿ, ಭರತೇಶ್, ವಿಕಾಸ್ ಶೆಟ್ಟಿ, ರಫೀಕ್ , ಶಬೀರ್ ಸಿದ್ದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.


