
ಕಾರು ಅಪಘಾತ ಸಂಭವಿಸಿದ ಪ್ರಕರಣವೊಂದರಲ್ಲಿ ಕಾರನ್ನು ಚಲಾಯಿಸುತ್ತಿದ್ದ ತಂದೆಯ ಮೇಲೆ ಮಗನೇ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ನರಮಜೆ ನಿವಾಸಿ ಹನೀಫ್ ಎಂಬವರು ತಂದೆ ಹಮೀದ್ ಎಂಬವರ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಮೀದ್ ಅವರು ಬೆಳ್ತಂಗಡಿಯಿಂದ ಉಳ್ಳಾಲ ದರ್ಗಾಕ್ಕೆ ಕಾರಿನಲ್ಲಿ ಪತ್ನಿ ಜಮೀಲಾ, ಮಕ್ಕಳಾದ ಮೊಹಮ್ಮದ್ ಅನಿಝ್, ಹಮೀದ್, ಅಜ್ಮಿಯಾ ಹಾಗೂ ಮಗಳ ಮಗ ಮೊಹಮ್ಮದ್ ಝಯಾನ್ ಅವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಸಜೀಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ಕಾರು ಸ್ಕಿಡ್ ಆಗಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.
ಘಟನೆಯಿಂದ ಕಾರಿನಲ್ಲಿದ್ದ ಎಲ್ಲರಿಗೂ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಮೀದ್ ಕಾರನ್ನು ದುಡುಕು ಹಾಗೂ ನಿರ್ಲಕ್ಷ್ಯದಿಂದ ವೇಗವಾಗಿ ಚಲಾಯಿಸಿದ ಕಾರಣ ಕಾರು ಗುಂಡಿಗೆ ಬಿದ್ದಿದೆ ಎಂದು ಆರೋಪಿಸಿ ಪುತ್ರ ಹನೀಫ್ ತಂದೆಯ ವಿರುದ್ಧನೇ ದೂರು ನೀಡಿದ್ದಾರೆ.


