ನೆಲ್ಯಾಡಿ, ಕಡಬ, ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನವಿಟ್ಟು ಸಾಲಪಡೆದ ತಂಡ. ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ವಂಚನೆ..

ನೆಲ್ಯಾಡಿ, ಕಡಬ, ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನವಿಟ್ಟು ಸಾಲಪಡೆದ ತಂಡ. ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ವಂಚನೆ..

ಕಡಬ/ನೆಲ್ಯಾಡಿ/ಉಪ್ಪಿನಂಗಡಿ:

ನೆಲ್ಯಾಡಿಯಲ್ಲಿರುವ ಸಹಕಾರ ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಇಟ್ಟು ಸಾಲ ಪಡೆದ ತಂಡವು ಅದೇ ರೀತಿಯಲ್ಲಿ ಉಪ್ಪಿನಂಗಡಿಯ ಸಹಕಾರಿ ಸಂಘ,ಅಲಂಕಾರು ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು ಲಕ್ಷಗಟ್ಟಲೆ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ.

ಮೊದಲು ಇದೇ ಆರೋಪಿಗಳು ಜ. 27 ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, 1.40 ಲಕ್ಷ ರೂ.ವನ್ನು ಸಾಲವಾಗಿ ಪಡೆದು ಮೋಸ ಮಾಡಿರುವ ಬಗ್ಗೆ ಈಗಾಗಲೇ ದೂರು ದಾಖಲಾಗಿತ್ತು.ಇದೀಗ ಮತ್ತೆ
ಉಪ್ಪಿನಂಗಡಿಯ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕಿ ಕಮಲಾ ಎಂಬವರು ದೂರು ನೀಡಿದ್ದು, ಇಲ್ಲೂ ಈ ತಂಡ ನಕಲಿ ಚಿನ್ನಾಭರಣ ಇರಿಸಿ 1.70 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ ಆರೋಪ ಕೇಳಿ ಬಂದಿದೆ. ಜ. 31 ರಂದು ಸಂಘದ ಕಚೇರಿಗೆ ಬಂದ ತಂಡ ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ 40 ಗ್ರಾಮ್ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿ 1.70 ಲಕ್ಷ ರೂ ಸಾಲ ಪಡೆದಿದೆ. ಅದೇ ರೀತಿಯಲ್ಲಿ ಕಡಬ ತಾಲೂಕಿನ ಅಲಂಕಾರು
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಇದರ ಶಾಖಾ ಪ್ರಬಂಧಕರಾದ ಶ್ರೀಮತಿ ರೇವತಿ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಇದೇ ಆರೋಪಿಗಳು ಜನವರಿ 30ರಂದು ಮದ್ಯಾಹ್ನ ಸಹಕಾರಿ ಸಂಘದ ಅಲಂಕಾರು ಶಾಖೆಗೆ ಬಂದು, ಮೇಲ್ನೋಟಕ್ಕೆ ನಕಲಿಯೆಂದು ಕಂಡುಬಾರದಿರುವಂತಹ 30.200 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಅಡವಿರಿಸಿ‌, ರೂ 1ಲಕ್ಷದ 35 ಸಾವಿರ ಹಣವನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ನೆಲ್ಯಾಡಿ ಗ್ರಾಮದಾತ ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ವಂಚನೆಗೈದಿರುವ ಬಗ್ಗೆ ವಿವಿಧ ಕಡೆಗಳಲ್ಲಿ ದೂರುಗಳು ದಾಖಲಾಗಿದೆ. ಪ್ರಕರಣದಲ್ಲಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರು ನಕಲಿ ಚಿನ್ನಾಭರಣವನ್ನು ಪರಿಶೀಲಿಸಿದ್ದು, ನೈಜ ಚಿನ್ನವೆಂದು ತಿಳಿಸಿರುವ ಬಗ್ಗೆಯೂ ತನಿಖೆಗಳು ನಡೆಯುತ್ತಿದೆ. ಈ ಆರೋಪಿಗಳಿಂದ ಇದೇ ರೀತಿ ಹಲವು ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ದಿನಂಪ್ರತಿ ಹಲವು ಕಡೆಗಳಲ್ಲಿ ದೂರುಗಳು ದಾಖಲಾಗುತ್ತಿದ್ದೂ, ತನಿಖೆ ನಡೆಯುತ್ತಿದೆ.

News Editor

Learn More →

Leave a Reply

Your email address will not be published. Required fields are marked *